ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು:  ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಉಂಟಾಗುತ್ತಿರುವ  ಹಾನಿಯನ್ನು  ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಮಹತ್ವದ ಆದೇಶವನ್ನ ಹೊರಡಿಸಿದ್ದು, ಇನ್ನೂ ಮುಂದೆ ಸರಕಾರಿ ಕಚೇರಿ ಹಾಗೂ ಕಾರ್ಯಕ್ರಮದಲ್ಲಿ  ಪ್ಲಾಸ್ಟಿಕ್ ಬಾಟಲ್‌ನಲ್ಲಿ ಕೊಡದಬಾರದು ಎನ್ನುವ ಬಗ್ಗೆ ಮಹತ್ವದ ಆದೇಶ ಮಾಡಿದೆ.ಇದನ್ನ ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಲಾಗಿದೆ.

ಸರ್ಕಾರದ ಆದೇಶದಲ್ಲಿ ಏನಿದೆ?
ಆರೋಗ್ಯ ಮತ್ತು ಪರಿಸರದ ಮೇಲೆ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ, ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಸಚಿವಾಲಯಗಳು, ಮತ್ತು ಸರ್ಕಾರಿ ಅನುದಾನ ಪಡೆಯುವ ಎಲ್ಲಾ ಸಂಸ್ಥೆಗಳು, ಕಲ್ಯಾಣ ಮಂಡಳಿಗಳು, ನಿಗಮಗಳು, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರ ಆಯೋಜಿಸುವ ಸಭೆಗಳಲ್ಲಿ ಪ್ಲಾಸ್ಟಿಕ್ ಒಮ್ಮೆ ಬಳಸಿ ಬಿಸಾಕುವ ನೀರಿನ ಬಾಟಲಿಗಳನ್ನು ಬಳಸುವುದು/ವಿತರಿಸುವುದು ನಿಷೇಧಿಸಲಾಗಿದೆ. ಸಭೆ ಸಮಾರಂಭಗಳಲ್ಲಿ ಶುದ್ಧ ಗಾಜು, ಉಕ್ಕು, ಪ್ಲಾಸ್ಟಿಕ್‌ ಅಲ್ಲದ ಲೋಟಗಳಲ್ಲಿ ನೀರು ನೀಡಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಸರ್ಕಾರ ಹಿಂದೆಯೂ ಸುತ್ತೋಲೆ ಹೊರಡಿಸಿತ್ತು
ಆದರೆ 2024ರ ನವೆಂಬರ್‌ನಲ್ಲಿ ಈ ಪ್ಲಾಸ್ಟಿಕ್ ನೀರಿನ ಬಾಟಲಿಗಳ ನಿಷೇಧ ಕುರಿತಂತೆ ಸುತ್ತೋಲೆ ಹೊರಡಿಸಿತ್ತು. ಒಮ್ಮೆ ಬಳಸಿ ಬಿಸಾಕುವ ಬಾಟಲಿಗಳ ಬದಲು ಸೂಕ್ತ ಸಮೂಹ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಲಾಗಿತ್ತು.ಆದರೆ ಈ ನಿಯಮವನ್ನು ಸಚಿವಾಲಯ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಯಲ್ಲಿಯೂ ಸರಿಯಾಗಿ ಪಾಲಿಸಲಾಗುತ್ತಿಲ್ಲ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ಸರ್ಕಾರದ ಉಪ ಕಾರ್ಯದರ್ಶಿಯವರು ಈ ಆದೇಶವನ್ನು ಪುನಃ ಪರಿಶೀಲಿಸಿ, ಕಡ್ಡಾಯವಾಗಿ ಈ ನಿಯಮವನ್ನು ಪಾಲಿಸಬೇಕು ಮತ್ತು ಪ್ಲಾಸ್ಟಿಕ್ ಬಳಕೆಗೆ ಬದಲಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು ಎಂದು ಸೂಚಿಸಿದ್ದಾರೆ.

ವಿಭಾಗದ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳು, ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಿಗೆ ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚನೆ ನೀಡಬೇಕು ಎಂದು ಸುತ್ತೋಲೆಯಲ್ಲಿ‌‌ ಸೂಚಿಸಲಾಗಿದೆ.

ಇದನ್ನೂ ಓದಿ