ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕಾಡಿನಿಂದ ನಾಡಿಗೆ ಬಂದ ಕಾಡುಹಂದಿಯೊಂದು ನಾಯಿಗಳು ಅಟ್ಟಿಸಿಕೊಂಡು ಓಡುವ ವೇಳೆ ಬಾವಿಗೆ ಬಿದ್ದ ಘಟನೆ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ವನ್ಯಜೀವಿ ರಕ್ಷಕ ಅಶೋಕ ನಾಯ್ಕ ಹಾಗೂ ಸ್ಥಳೀಯರ ಸಹಾಯದಿಂದ ಕಾರ್ಯಾಚರಣೆ ನಡೆಸಿ ಕಾಡುಹಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.
ಬರ್ಗಿ ಗ್ರಾಮದ ಸಮೀಪದ ಗಜನಿ ಪ್ರದೇಶದಲ್ಲಿ ಭತ್ತದ ಗದ್ದೆಗೆ ಕಾಡುಹಂದಿಯೊಂದು ನುಗ್ಗಿತ್ತು. ಈ ವೇಳೆ ನಾಯಿಗಳು ಅದನ್ನು ಅಟ್ಟಿಸಿಕೊಂಡು ಓಡಿಸಿದ್ದರಿಂದ ಗಾಬರಿಗೊಂಡ ಕಾಡುಹಂದಿ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ರಕ್ಷಕ ಅಶೋಕ ನಾಯ್ಕ ಅವರು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದೊಂದಿದೆ ಕಾರ್ಯಾಚರಣೆ ನಡೆಸಿ, ಕಾಡುಹಂದಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.
ನಂತರ ಕಾಡುಹಂದಿಯನ್ನು ಪರಿಶೀಲಿಸಿ, ಯಾವುದೇ ಗಂಭೀರ ಗಾಯಗಳಿಲ್ಲದಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

