ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಸೂಕ್ಷ್ಮ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ಆಚರಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲೆಯಾದ್ಯಂತ ಒಟ್ಟು 1,492 ಕಡೆ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆದಿದೆ.
ಹೊನ್ನಾವರ-ಭಟ್ಕಳ ವಿಭಾಗದಲ್ಲಿ 392, ಕಾರವಾರ-ಅಂಕೋಲ ವಿಭಾಗದಲ್ಲಿ 131, ಶಿರಸಿ-ಯಲ್ಲಾಪುರ-ಮುಂಡಗೋಡು ವಿಭಾಗದಲ್ಲಿ 668 ಹಾಗೂ ದಾಂಡೇಲಿ-ಹಳಿಯಾಳ-ಜೋಯಿಡಾ ವಿಭಾಗದಲ್ಲಿ 301 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಹಬ್ಬದ ಐದನೇ ದಿನ 491 ಹಾಗೂ 11ನೇ ದಿನ 130 ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 400 ಹೋಮ್ಗಾರ್ಡ್ಸ್, 15 ಡಿಆರ್ ತುಕಡಿಗಳು ಹಾಗೂ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ 236 ಲೈವ್ ಕ್ಯಾಮೆರಾಗಳ ಜತೆಗೆ ಸುಮಾರು 19 ಸಾವಿರ ಕ್ಯಾಮೆರಾಗಳ ಮ್ಯಾಪಿಂಗ್ ಮಾಡಲಾಗುತ್ತಿದೆ. ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಡ್ರೋನ್ ಮೂಲಕವೂ ಸರ್ವೆಲೆನ್ಸ್ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದ್ದಾರೆ.
ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿ ಸಿಂಗಲ್ ವಿಂಡೋ ಸಮಿತಿ ರಚಿಸಲಾಗಿದೆ. ಗಣೇಶೋತ್ಸವದ ಅಲಂಕಾರದಲ್ಲಿಯೂ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸುವಂತೆ ಸೂಚಿಸಲಾಗಿದೆ.
ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸದಂತೆ ನುರಿತ ಈಜುಗಾರರನ್ನು ನಿಯೋಜಿಸಲಾಗುತ್ತಿದೆ. ಡಿಜೆ ಬಳಕೆಗೆ ನಿರ್ಬಂಧವಿದ್ದು, ಮೈಕ್ ಬಳಕೆಗೆ ನಿಗದಿತ ಧ್ವನಿ ಮಿತಿಯೊಳಗೆ ಅವಕಾಶ ನೀಡಲಾಗಿದೆ. ಕೈಗಾರಿಕಾ ಪ್ರದೇಶದಲ್ಲಿ 75, ವಾಣಿಜ್ಯ ಪ್ರದೇಶದಲ್ಲಿ 65, ವಸತಿ ಪ್ರದೇಶದಲ್ಲಿ 55 ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 50 ಡೆಸಿಬಲ್ವರೆಗೆ ಧ್ವನಿವರ್ಧಕ ಬಳಸಲು ಅವಕಾಶವಿದೆ.
ಇನ್ನು ಪಟಾಕಿಗಳನ್ನು ಎಲ್ಲೆಂದರಲ್ಲಿ ಮಾರಾಟ ಮಾಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಜಿಲ್ಲೆಯಾದ್ಯಂತ 50 ಸ್ಥಳಗಳನ್ನು ಪಟಾಕಿ ಮಳಿಗೆಗಳಿಗಾಗಿ ಗುರುತಿಸಲಾಗಿದ್ದು, ನಿಗದಿತ ಸ್ಥಳಗಳಲ್ಲಿಯೇ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

