ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಾಸಕ ಮಂಕಾಳ್ ಎಸ್. ವೈದ್ಯ ಅವರ ಹೆಸರು ಕೊನೆಯ ಕ್ಷಣದಲ್ಲಿ ಕೈಬಿಟ್ಟಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ಬೆಳವಣಿಗೆಗೆ ಜಿಲ್ಲೆಯ ಕೆಲ ಕಾಂಗ್ರೆಸ್ ಶಾಸಕರ ರಾಜೀನಾಮೆ ಬೆದರಿಕೆಯೇ ಕಾರಣ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ನ ನಾಲ್ವರು ಶಾಸಕರು ಹಾಗೂ ಕಾಂಗ್ರೆಸ್ ಬೆಂಬಲಿತ ಓರ್ವ ಶಾಸಕರಿದ್ದು, ಸಚಿವ ಸ್ಥಾನ ಹಂಚಿಕೆ ವೇಳೆ ಜಿಲ್ಲೆಯ ಕೆಲ ಶಾಸಕರು ಮಂಕಾಳ್ ವೈದ್ಯ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು ಎನ್ನುವ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಕರಾವಳಿ ಓರ್ವ ಶಾಸಕರು ಎಲ್ಲಾ ಮಾರ್ಗದಲ್ಲಿಯೂ ತನಗೆ ಸಚಿವ ಸ್ಥಾನ ಕೊಡಬೇಕು ಎಂದು ಪ್ರಯತ್ನ ಮಾಡಿದ್ದರು ಎನ್ನಲಾಗಿದ್ದು ಒಂದೊಮ್ಮೆ ತನಗೆ ಕೊಡದೆ ಇದ್ದರೆ ಯಾರಿಗೂ ಕೊಡದಂತೆ ಪಟ್ಟು ಹಿಡಿದ್ದರು ಎನ್ನಲಾಗಿದೆ. ಆದರೆ ಹೈಕಮಾಂಡ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಹಾಗೂ ಮತ್ತೊಮ್ಮೆಗೆ ಕರಾವಳಿಯಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಮೀನುಗಾರ ಸಮುದಾಯಕ್ಕೆ ಸೇರಿದ ಮಂಕಾಳ್ ವೈದ್ಯ ಅವರನ್ನ ಸಚಿವರನ್ನಾಗಿ ಮಾಡಲು ಕಾಂಗ್ರೆಸ್ ಹೈಕಮಾಂಡ ತೀರ್ಮಾನಿಸಿತ್ತು ಎನ್ನಲಾಗಿದೆ. ಆದರೆ ಈ ಬೆಳವಣಿಗೆಯಿಂದ ಮುಂದಿನ ದಿನದಲ್ಲಿ ಕಾಂಗ್ರೆಸ್ಗೆ ಲಾಭ ಆಗುವುದಕ್ಕಿಂತ ನಷ್ಟವೇ ಹೆಚ್ಚಾಗಲಿದೆ ಎನ್ನುವದು ರಾಜಕೀಯ ವಿಶ್ಲೇಷಕ ವಾದ.
ಮಾಹಿತಿ ಗಳ ಪ್ರಕಾರ, ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಎರಡನೇ ಪಟ್ಟಿಯಲ್ಲಿ ಮಂಕಾಳ್ ವೈದ್ಯ ಅವರ ಹೆಸರು ಅಂತಿಮಗೊಂಡಿತ್ತು. ಆದರೆ, ಹೆಸರು ಘೋಷಣೆಯಾಗುತ್ತಿದಂತೆ ಜಿಲ್ಲೆಯ ಕೆಲ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅವರ ಹೆಸರನ್ನು ಕೈಬಿಡದಿದ್ದರೆ ರಾಜೀನಾಮೆ ನೀಡುವುದಾಗಿ ಸಿ ಎಂ ಡಿಕೆ ಶಿವಕುಮಾರ ಅವರಿಗಡ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಇದೇ ಸಂದೇಶವನ್ನು ದೆಹಲಿಯ ನಾಯಕರಿಗೂ ರವಾನಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಬೆಳವಣಿಗೆಯ ಬಳಿಕ ಪಟ್ಟಿಯಿಂದ ಮಂಕಾಳ್ ವೈದ್ಯ ಅವರ ಹೆಸರನ್ನು ಕೊನೆಯ ಕ್ಷಣದಲ್ಲಿ ಕೈಬಿಡಲಾಗಿತ್ತು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಈ ನಡುವೆ, ಹಿರಿಯ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಅವರ ಹೆಸರು ಪಟ್ಟಿಯಲ್ಲಿ ಇರಲಿಲ್ಲ ಎಂಬ ಕಾರಣದಿಂದ ಅವರನ್ನು ಸೇರಿಸಲು ಅನಿವಾರ್ಯವಾಗಿ ಮಂಕಾಳ್ ವೈದ್ಯ ಅವರ ಹೆಸರನ್ನು ಕೈಬಿಡಬೇಕಾಯಿತು ಎಂದು ಕೆಲ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಿದ್ದರೆ . ಇನ್ನೂ ದೆಹಲಿ ನಾಯಕರು “ಪಟ್ಟಿ ತಯಾರಿಸುವ ವೇಳೆ ತಾಂತ್ರಿಕ ಸಮಸ್ಯೆಯಿಂದ ಮಂಕಾಳ್ ವೈದ್ಯ ಅವರ ಹೆಸರು ಸೇರಿತ್ತು” ಎಂಬ ರೀತಿಯ ಹೇಳಿಕೆ ನೀಡಿದ್ದು, ಈ ವಿಚಾರ ವಿರೋಧ ಪಕ್ಷಗಳ ಟೀಕೆಗೆ ಸಹ ಗುರಿಯಾಯಿತು.
ಸಚಿವ ಸಂಪುಟ ವಿಸ್ತರಣೆಗೆ ಹಲವು ದಿನಗಳು ಕಳೆದರೂ ಮಂಕಾಳ್ ವೈದ್ಯ ಅವರ ಹೆಸರು ಕೊನೆಯ ಕ್ಷಣದಲ್ಲಿ ಕೈಬಿಟ್ಟ ನೈಜ ಕಾರಣ ಏನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಜಿಲ್ಲೆಯ ಕೆಲ ಶಾಸಕರ ಅಸಮಾಧಾನ ಮತ್ತು ರಾಜೀನಾಮೆ ಬೆದರಿಕೆಯೇ ಉತ್ತರ ಕನ್ನಡಕ್ಕೆ ದೊರಕಬೇಕಿದ್ದ ಸಚಿವ ಸ್ಥಾನ ಕೈತಪ್ಪಲು ಕಾರಣ ಎಂಬ ಚರ್ಚೆಗಳು ಇದೀಗ ಬೆಂಗಳೂರು ರಾಜಕೀಯ ವಲಯದಲ್ಲಿ ಕೂಡ ಚರ್ಚೆಯಲ್ಲಿ.ಸಚಿವ ಸ್ಥಾನ ಕೈತಪ್ಪಿದ ಬೆಳವಣಿಗೆ ಮಾತ್ರ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಹಿಂದುಳಿದ ಸಮುದಾಯಕ್ಕೆ ನಿರಾಸೆ ಮೂಡಿಸಿರುವುದಂತು ಸತ್ಯ.



