ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ತಂದೆಯ ಸಾವಿಗೆ ಮಾಟ-ಮಂತ್ರ ಕಾರಣ ಎಂದು ಆರೋಪಿಸಿ ದಂಪತಿ ಮೇಲೆ ಹಲ್ಲೆ ನಡೆಸಿದ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಕೆ ಸಮೀಪದ ಅಬ್ಬಿಹಿತ್ತಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಅಬ್ಬಿಹಿತ್ತಿ ನಿವಾಸಿ 41 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಹೊನ್ನೆಮಡಿ, ಬೆಳಕೆ ನಿವಾಸಿಗಳಾದ ಇಬ್ಬರು ಸಹೋದರರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತರ ತಂದೆ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದರು.ಅವರ ಮನೆಗೆ ಸಂತಾಪ ಸೂಚಿಸಿ ಯೋಗಕ್ಷೇಮ ವಿಚಾರಿಸಲು ಮಹಿಳೆ, ಅವರ ಪತಿ ಹಾಗೂ ಕುಟುಂಬದವರು ಜುಲೈ 26ರಂದು ಬೆಳಿಗ್ಗೆ ತೆರಳುತ್ತಿದ್ದ ವೇಳೆ ಆರೋಪಿತರು ದಾರಿಯಲ್ಲಿ ತಡೆದಿದ್ದಾರೆ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ, “ನಮ್ಮ ತಂದೆಯ ಸಾವಿಗೆ ನೀವು ಮಾಟ-ಮಂತ್ರ ಮಾಡಿಸಿದ್ದೀರಿ. ನಮ್ಮ ಮನೆಗೆ ಬರಬೇಡಿ” ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆನ್ನಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆಯ ಪತಿಯ ಮೇಲೆ ಓರ್ವ ಕೈಯಿಂದ ಹಲ್ಲೆ ನಡೆಸಿದ್ದು, ಮತ್ತೊಬ್ಬ ಆರೋಪಿ ಕಾರಿನಲ್ಲಿದ್ದ ಕಬ್ಬಿಣದ ರಾಡ್ ತೆಗೆದು ತಲೆಗೆ ಹೊಡೆದು ಗಾಯಪಡಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಲಾಟೆ ತಡೆಯಲು ಮುಂದಾದ ಮಹಿಳೆಯ ಮೇಲೂ ಹಲ್ಲೆ ನಡೆಸಿ,ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



