ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮಾರಿ ಹೊರೆಯನ್ನು ಸ್ಥಳಾಂತರಿಸುವ ವೇಳೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆಸಿ ವ್ಯಕ್ತಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರಗಿ ನಿವಾಸಿ ಮಂಜುನಾಥ ವೆಂಕಟ್ರಮಣ ಪಟಗಾರ ದೂರು ನೀಡಿದ್ದು, ಜೂನ್ 14ರಂದು ಸಂಜೆ ಸುಮಾರು 4.45ರ ವೇಳೆಗೆ ಚಿತ್ರಗಿ ಹಳಕಾರ ಕ್ರಾಸ್ ಸಮೀಪ ಗ್ರಾಮದ ಸಂಪ್ರದಾಯದಂತೆ ರಸ್ತೆ ಬದಿಯಲ್ಲಿ ಇರಿಸಿದ್ದ ಮಾರಿ ಹೊರೆಯನ್ನು ಲಾರಿಯಲ್ಲಿ ಹಣ್ಣಿಮಠಕ್ಕೆ ಕಳುಹಿಸಲಾಗುತ್ತಿತ್ತು. ಈ ವೇಳೆ ಉಳಿದ ಹೊರೆಯನ್ನು ಗ್ರಾಮಸ್ಥರೊಂದಿಗೆ ಒಟ್ಟುಗೂಡಿಸುತ್ತಿದ್ದಾಗ ಆರೋಪಿತರು ಬೈಕ್ನಲ್ಲಿ ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ.ರಸ್ತೆಯ ಮೇಲೆ ಕಸ ಹಾಕಿ ತೊಂದರೆ ಕೊಡುತ್ತಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿತರು, ಬಳಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಮುಖ ಆರೋಪಿ ಗಣೇಶ ಎನ್ನುವಾತ ದೂರುರಾದರ ಕುತ್ತಿಗೆಯನ್ನು ಕೈಗಳಿಂದ ಬಿಗಿಯಾಗಿ ಹಿಸುಕಿ, ಉಗುರಿನಿಂದ ಪರಚಿ ತಳ್ಳಿಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮತ್ತೋರ್ವ ಆರೋಪಿ ಕೃಷ್ಣಾ @ ವಿಕ್ಕಿ ಕೂಡ ಕುತ್ತಿಗೆಯನ್ನು ಕಾಲಿನಿಂದ ಮೆಟ್ಟಿ ಕೊಲೆ ಯತ್ನ ನಡೆಸಿದ್ದು, ಮುಂದೆಯೂ ಸಿಕ್ಕರೆ ಕೊಲೆ ಮಾಡಿ ನಾಪತ್ತೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಹಲ್ಲೆ ಹಾಗೂ ಜೀವ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



