ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ಹೊನ್ನಾವರ ಬಂಗಾರದ ಆಭರಣ ಕಳ್ಳತನ ಪ್ರಕರಣವನ್ನು ಭೇದಿಸಿರುವ ಹೊನ್ನಾವರ ಪೊಲೀಸರು, ₹17.08 ಲಕ್ಷ ಮೌಲ್ಯದ 127.5 ಗ್ರಾಂ ಬಂಗಾರದ ಆಭರಣವನ್ನು ಜಪ್ತಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಫಿರ್ಯಾದಿದಾರರ ಮನೆಯಲ್ಲಿ ಕಬ್ಬಿಣದ ಟ್ರಂಕ್‌ನಲ್ಲಿ ಇರಿಸಿದ್ದ ಒಟ್ಟು 128 ಗ್ರಾಂ ಬಂಗಾರದ ಆಭರಣ ಹಾಗೂ ನಗದು ಹಣ ಕಳ್ಳತನವಾಗಿತ್ತು. ಈ ಸಂಬಂಧ ಧನುಶ್ ತಂದೆ ಶ್ರೀಧರ ಗೌಡ ವಿರುದ್ಧ ನೀಡಲಾದ ದೂರಿನ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.122/2026, ಕಲಂ 305(ಬಿ) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ತನಿಖೆಗಾಗಿ ವಿಶೇಷ ಪತ್ತೆ ತಂಡ ರಚಿಸಲಾಗಿದ್ದು, ಖಚಿತ ಮಾಹಿತಿಯ ಆಧಾರದ ಮೇಲೆ ದೇವಸ್ಥಾನಕೇರಿ ನಿವಾಸಿ ಧನುಶ್ ಶ್ರೀಧರ ಗೌಡ ಹಾಗೂ ಕಳ್ಳತನದ ಆಭರಣವನ್ನು ಸ್ವೀಕರಿಸಿ ವಿಲೇವಾರಿ ಮಾಡಿದ ಮೆಟ್ಟಿನಗದ್ದೆ, ಗೇರುಸೊಪ್ಪಾ ನಿವಾಸಿ ಗೌರೀಶ ಗಣಪತಿ ಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ವಿಚಾರಣೆ ವೇಳೆ ಆರೋಪಿಯು ಕಳ್ಳತನದ ಬಂಗಾರದ ಆಭರಣವನ್ನು ಹೊನ್ನಾವರದ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಹಾಗೂ ಮುತ್ತೂಟ್ ಫಿನ್‌ಕಾರ್ಪ್‌ನಲ್ಲಿ ಅಡಮಾನ ಇಟ್ಟಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಹಾಗೂ ಅವರು ಮಾರಾಟ ಮಾಡಿದ್ದ ಒಟ್ಟು ₹17,08,300 ಮೌಲ್ಯದ 127.5 ಗ್ರಾಂ ಬಂಗಾರದ ಆಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಕಾನೂನು ಪ್ರಕ್ರಿಯೆಯಂತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. (ಐಪಿಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ, ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದಲ್ಲಿ ಪಿಎಸ್‌ಐ ಮಹಾಂತೇಶ ವಾಲ್ಮೀಕಿ, ಪಿಎಸ್‌ಐ ಸಂಗೀತಾ, ಪಿಎಸ್‌ಐ ರೇಣುಕಾ ಹಾಗೂ ಸಿಬ್ಬಂದಿ ಆರೋಪಿಗಳ ಬಂಧನ ಮತ್ತು ಬಂಗಾರದ ಆಭರಣ ಜಪ್ತಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿ ಪ್ರಶಂಸಿಸಿದೆ.

ಇದನ್ನು ಓದಿ/ಲಾರಿ ಕಳ್ಳತನ ಪ್ರಕರಣದ ಬೆಳಗಾವಿ ಮೂಲದ ಆರೋಪಿ ಬಂಧನ; ಹಳಿಯಾಳ ಪೊಲೀಸರ ಕಾರ್ಯಾಚರಣೆ