ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಪಟ್ಟಣದ ಮಾಸ್ತಿಕಟ್ಟೆ ಸಮೀಪ ಖಾಸಗಿ ಬಸ್‌ನ ಡಿಕ್ಕಿಯ ಬಾಗಿಲು (ಲಗೇಜ್ ಬಾಗಿಲು) ಬಡಿದು ಸಂಭವಿಸಿದ ಅಪಘಾತದಲ್ಲಿ ಹೊನ್ನಾವರ ಮೂಲದ‌ ಕೆಎಸ್‌ಆರ್‌ಟಿಸಿ ಚಾಲಕ ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಮೃತ ವ್ಯಕ್ತಿ ಬಾಲಚಂದ್ರ ಗಜಾನನ ನಾಯ್ಕ (43) ಎಂದು ಗುರುತಿಸಲಾಗಿದೆ. ಈತ ಹೊನ್ನಾವರ ತಾಲೂಕಿನ ಹಳದೀಪುರ ಕಿರಬೈಲ್ ನಿವಾಸಿಯಾಗಿದ್ದು, ಕೆಎಸ್‌ಆರ್‌ಟಿಸಿ ಚಾಲಕನಾಗಿದ್ದ
ಈತ ಶುಕ್ರವಾದ ರಾತ್ರಿ ಸುಮಾರು 9.15 ಗಂಟೆ ಸುಮಾರಿಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ (ಕೆಎ-47/ಇಬಿ-6598) ನಲ್ಲಿ ಕುಮಟಾ ಹಳೆ ಬಸ್ ನಿಲ್ದಾಣದ ಕಡೆಯಿಂದ ಮಾಸ್ತಿಕಟ್ಟೆ ಕಡೆ ಸಂಚರಿಸುತ್ತಿದ್ದಾಗ ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ (ಕೆಎ-51/ಎಡಿ-5297)‌ನ ಎಡಭಾಗದ ಲಗೇಜ್ ಡಿಕ್ಕಿಯ ಬಾಗಿಲು ತೆರೆದ ಸ್ಥಿತಿಯಲ್ಲಿದ್ದು, ಅದು ಸ್ಕೂಟರ್ ಸವಾರನ ಕುತ್ತಿಗೆ ಮತ್ತು ತಲೆಗೆ ಬಡಿದ ಪರಿಣಾಮ ಅತ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎನ್ನಲಾಗಿದೆ.

ತಕ್ಷಣ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಕುರಿತು ಮೃತರ ಸಹೋದರ ಗಿರೀಶ ಗಜಾನನ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ/ ಬಸ್-ಬೈಕ್ ಮುಖಾಮುಖಿ ಡಿಕ್ಕಿ : ಸವಾರ ಗಂಭೀರ