ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ತಾಲೂಕಿನ ಹಳಗೆಜೂಗದಿಂದ ಕಾರವಾರಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗಟಾರಕ್ಕೆ ಜಾರಿದ ಘಟನೆ ಬುಧವಾರ ಧೋಲ್ ಸಮೀಪ ನಡೆದಿದೆ.

ಹಳಗೆಜೂಗದಿಂದ ಕಾರವಾರಕ್ಕೆ ತೆರಳುತ್ತಿದ್ದ ರಾತ್ರಿ ವಸತಿ ಬಸ್ ಇದಾಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಬಸ್ ಚಾಲಕ ಸ್ಥಳೀಯ ಮುಖಂಡ ಕುಮಾರ್ ನಾಯ್ಕ್ ಅವರಿಗೆ ಮಾಹಿತಿ ನೀಡಿದ್ದು, ಮಾಹಿತಿ ಪಡೆದ ಕುಮಾರ್ ನಾಯ್ಕ್ ತಕ್ಷಣ ಸ್ಥಳಕ್ಕೆ ಧಾವಿಸಿ ಜೆಸಿಬಿ ವ್ಯವಸ್ಥೆ ಮಾಡಿಸಿದರು. ಬಳಿಕ ಜೆಸಿಬಿಯ ಸಹಾಯದಿಂದ ಗಟಾರಕ್ಕೆ ಜಾರಿದ್ದ ಬಸ್ ಅನ್ನು ಸುರಕ್ಷಿತವಾಗಿ ಹೊರತೆಗೆದು ರಸ್ತೆಗೆ ತರಲಾಯಿತು.

ಬಸ್ ಅನ್ನು ರಸ್ತೆಗೆ ತರುವ ಕಾರ್ಯಕ್ಕೆ ಅಗತ್ಯವಾದ ಎಲ್ಲ ವೆಚ್ಚವನ್ನು ಕುಮಾರ್ ನಾಯ್ಕ್ ಸ್ವತಃ ಭರಿಸಿದ್ದು, ಅವರ ತ್ವರಿತ ಸ್ಪಂದನೆ ಮತ್ತು ಸಹಾಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ/ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್: 100 ದಿನಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ