ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಮೂರೂರು ಗ್ರಾಮದಲ್ಲಿ ಭೂ ಒತ್ತುವರಿ ಆರೋಪದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷರಾದ ಜಿ. ಐ. ಹೆಗಡೆ ವಿರುದ್ಧ ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು,ಕ್ರಮ ಜರುಗಿಸುವಂತೆ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಲಾಗಿದೆ.

ಮೂರೂರು ಗ್ರಾಮದ ಸರ್ವೆ ನಂಬರ್ 191ರಲ್ಲಿ ಸುಮಾರು 3 ಎಕರೆ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಲು ಯತ್ನಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ವಿಚಾರ ತಿಳಿದು ಸುಮಾರು 500ಕ್ಕೂ ಹೆಚ್ಚು ಗ್ರಾಮಸ್ಥರು ಸೇರಿ ಸ್ಥಳಕ್ಕೆ ಧಾವಿಸಿ, ನಡೆಯುತ್ತಿದ್ದ ಕಾರ್ಯವನ್ನು ತಡೆಹಿಡಿದಿದ್ದಾರೆ.

ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಈ 3 ಎಕರೆ ಅರಣ್ಯ ಪ್ರದೇಶದಲ್ಲಿ ಗ್ರಾಮಕ್ಕೆ ಸಂಬಂಧಿಸಿದ “ಜಟಕ ದೇವರು” ಸ್ಥಳವಿದ್ದು, ಸುಮಾರು 700ಕ್ಕೂ ಹೆಚ್ಚು ಮನೆಗಳವರು ಈ ಸ್ಥಳವನ್ನು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದರು. ಇಂತಹ ಪವಿತ್ರ ಸ್ಥಳವನ್ನು ಒತ್ತುವರಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇನ್ನು, ಖಾಸಗಿ ವ್ಯಕ್ತಿಯೊಬ್ಬರು ಖರೀದಿ ಮಾಡಿರುವ ಇಳಿಜಾರು ಪ್ರದೇಶದ ಬದಲಾಗಿ, ಸಮತಟ್ಟಾದ ಅರಣ್ಯ ಪ್ರದೇಶದ 3 ಎಕರೆ ಜಾಗವನ್ನು ನೀಡುವ ಕುರಿತು ಒಪ್ಪಂದ ನಡೆದಿದೆ ಎಂಬ ಮಾಹಿತಿ ಸಹ ಹೊರಬಿದ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು 2021ರಲ್ಲಿ ಹಾಗೂ ತಹಶೀಲ್ದಾರರು ನಡೆಸಿದ ಪರಿಶೀಲನೆಯ ಬಳಿಕ, ಈ ಜಾಗವು ಕಂದಾಯ ಇಲಾಖೆಗೆ ಸೇರಿಲ್ಲ, ಅದು ಅರಣ್ಯ ಇಲಾಖೆಗೆ ಸೇರಿದ ಜಾಗ ಎಂಬುದಾಗಿ ಲಿಖಿತವಾಗಿ ದೃಢಪಡಿಸಿದ್ದಾರೆಯೆಂದು ಗ್ರಾಮಸ್ಥರು ಹೇಳಿದ್ದಾರೆ.

ಆದರೂ ಸಹ, ರಾಜಕೀಯ ಒತ್ತಡದ ಮೂಲಕ ಸರ್ವೆ, ಗಡಿ ಗುರುತಿಸುವಿಕೆ ಮತ್ತು ಬೇಲಿ ನಿರ್ಮಾಣದಂತಹ ಚಟುವಟಿಕೆಗಳನ್ನು ಮುಂದುವರಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ 200ಕ್ಕೂ ಹೆಚ್ಚು ಗ್ರಾಮಸ್ಥರು ಸ್ಥಳಕ್ಕೆ ತೆರಳಿ, ಜಿ. ಐ. ಹೆಗಡೆ ಅವರನ್ನು ಪ್ರಶ್ನಿಸಿ, ಒತ್ತುವರಿ ಕಾರ್ಯವನ್ನು ತಡೆದಿದ್ದಾರೆ.

ಗ್ರಾಮಸ್ಥರು ಈ ಪ್ರಕರಣದ ಕುರಿತು ತಕ್ಷಣವೇ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ, ರಾಜಕೀಯ ಪ್ರಭಾವ ಬಳಸಿ ಇಂತಹ ಚಟುವಟಿಕೆಗಳನ್ನು ಮುಂದುವರಿಸುವವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.