ಸುದ್ದಿಬಿಂದು ಬ್ಯೂರೋ ವರದಿ
ಜೋಯಿಡಾ :ತಾಲೂಕಾ ಕೇಂದ್ರದಿಂದ ಕೇವಲ ಎಂಟು ಕಿ.ಮೀ. ದೂರದಲ್ಲಿರುವ ಗುಂದ-ಉಳವಿ ಮಾರ್ಗದಲ್ಲಿನ ಕೈಟಾ ಎಂಬಲ್ಲಿ ಸೇತುವೆ ಪಕ್ಕದಲ್ಲಿ ಭಾರಿ ಭೂ ಕುಸಿತ ಉಂಟಾಗಿದ್ದು. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆ ಪಕ್ಕದ ಗಟಾರದ ನೀರು‌ ಸರಾಗವಾಗಿ ಹರಿಯದೆ‌‌ ಇರುವ ಹೆದ್ದಾರಿಯಲ್ಲೆ‌‌ ತುಂಬಿಕೊಂಡ ಪರಿಣಾಮವಾಗಿ ಸೇತುವೆ ಪಕ್ಕದ ಭಾಗದಲ್ಲಿ ಭೂ ಕುಸಿತ ಉಂಟಾಗಿದೆ.

ಈ ಹೆದ್ದಾರಿಯಲ್ಲಿ ದಾಂಡೇಲಿ, ಶಿರಸಿ, ಬೈಲಹೊಂಗಲ, ಬೆಳಗಾವಿ ಸೇರಿದಂತೆ ಹಲವು ಪ್ರಮುಖ ಕಡೆಗಳಿಗೆ ಸಂಚಾರವಿರುವ ಬಸ್‌ಗಳು ಓಡಾಡುತ್ತಿದ್ದು, ಭೂ ಕುಸಿತದಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಅತಂಕ ಮನೆಮಾಡಿದೆ.ಈ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ  ಸ್ಥಳಕ್ಕೆ ಭೇಟಿ ನೀಡಿ ತುರ್ತು ನಿರ್ವಹಣಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇಲ್ಲಿ ಕ್ಲಿಕ್ ಮಾಡಿ : ಸುದ್ದಿಬಿಂದು ಚಾನಲ್‌ ಸೇರಿಕೊಳ್ಳಿ.

ಕಳೆದ ವರ್ಷವೂ ಇದೇ ರಸ್ತೆಯ ಅವುರ್ಲಿ ಎಂಬಲ್ಲಿ ಇದೇ ರೀತಿಯ ಸೇತುವೆ ಕುಸಿತ ಸಂಭವಿಸಿದ್ದು, ಆರು ತಿಂಗಳುಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದರು. ಆಗ ಬದಲಿ ಮಾರ್ಗವಾಗಿ ಜೋಯಿಡಾ-ಕುಂಬಾರವಾಡಾ-ಉಳವಿ ಮಾರ್ಗದಿಂದ ಗುಂದ ಗ್ರಾಮ ಪಂಚಾಯತಿಗೆ ಸಂಪರ್ಕ ಕಲ್ಪಿಸಲಾಗಿತ್ತು.

ಈಗ ಕೈಟಾ ಸೇತುವೆಯ ಪರಿಸ್ಥಿತಿ ಕೂಡ  ಹದಗೆಟ್ಟಿರುವುದರಿಂದ, ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷರು ಕೂಡ ಲೋಕೋಪಯೋಗಿ ಇಲಾಖೆಯೊಂದಿಗೆ ಸಂಪರ್ಕಿಸಿ ತಕ್ಷಣ ಕಾರ್ಯೋನ್ಮುಖರಾಗಿ‌‌‌‌‌ ದುರಸ್ಥಿ ಕಾಮಗಾರಿ ಮಾಡ ಬೇಕಿದೆ.‌ಇಲ್ಲದೆ ಹೋದಲ್ಲಿ ಬಸ್ ಸಂಚಾರವೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.ಈ ಹಿನ್ನೆಲೆಯಲ್ಲಿ,ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ : ಕುಮಟಾ‌-ಶಿರಸಿ‌‌ ಹೆದ್ದಾರಿ ದುರಸ್ತಿಗಾಗಿ Protest: ತಹಶೀಲ್ದಾರ್ ಕಚೇರಿಗೆ ಮುತ್ತಿಗೆ