ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟ ಸಮೀಪದ ಜೋಗನ ಹಕ್ಕಲು ಜಲಪಾತದಲ್ಲಿ ಕಾಲು ಜಾರಿ ಹಳ್ಳದಲ್ಲಿ ಕೊಚ್ಚಿ ಹೋಗಿ ಕಣ್ಮರೆಯಾಗಿದ್ದ ಯುವಕ ಪವನ್ ಶೋಧ ಕಾರ್ಯಾಚರಣೆಗೆ ಇದೀಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವನ್ನು ನಿಯೋಜಿಸಲಾಗಿದೆ.
ಸೋಮನಳ್ಳಿ ಗ್ರಾಮದ ಉಂಬಳೆಕೊಪ್ಪದ ನಿವಾಸಿ ಪವನ್, ಭಾನುವಾರ ಸ್ನೇಹಿತ ವಾಸುದೇವ್ ಜೊತೆಗೆ ಜೋಗನ ಹಕ್ಕಲು ಫಾಲ್ಸ್ ವೀಕ್ಷಣೆಗೆ ಹೋಗಿದ್ದ ಸಂದರ್ಭದಲ್ಲಿ, ಫಾಲ್ಸ್ ಬಳಿ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನ ದಾಟುವಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಳೆದ ನಾಲ್ಕು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಜಲಪಾತದಲ್ಲಿ ನೀರಿನ ಹರಿವು ಅಧಿಕವಾಗಿರುವುದರಿಂದ ಶೋಧ ಕಾರ್ಯ ನಡೆಸಲು ಅಡಚಣೆ ಉಂಟಾಗಿತ್ತು. ಇದೀಗ ಶೋಧ ಕಾರ್ಯವನ್ನು ಪರಿಣಾಮಕಾರಿಯಾಗಿ ಮುಂದುವರಿಸಲು 28 ಸದಸ್ಯರ NDRF ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ತಂಡವು ಹೊಸ ತಂತ್ರಜ್ಞಾನ ಮತ್ತು ಉಪಕರಣಗಳ ಸಹಾಯದಿಂದ ಯುವಕನ ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದೆ.