ಸುದ್ದಿಬಿಂದು ಬ್ಯೂರೋ ವರದಿ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್–ಅಮೆರಿಕ ನಡುವಿನ ಉದ್ವಿಗ್ನತೆ ಜಾಗತಿಕ ಇಂಧನ ಸರಬರಾಜಿನ ಮೇಲೆ ತೀವ್ರ ಪರಿಣಾಮ ಬೀರಿದ್ದು, ಅದರ ನೇರ ಹೊಡೆತ ಇದೀಗ ಕರ್ನಾಟಕ ರಾಜ್ಯದಲ್ಲೂ ಕಾಣಿಸಿಕೊಳ್ಳುತ್ತಿದೆ. ಎಲ್ಪಿಜಿ (LPG) ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮತ್ತೆ ಹೊತ್ತಿ ಉರಿಯುತಿವೆ ಕಟ್ಟಿಗೆ ಒಲೆಗಳು
ನಗರದಿಂದ ಹಳ್ಳಿವರೆಗೆ ಬಹುತೇಕ ಮನೆಗಳಲ್ಲಿ ಅಡುಗೆಗೆ ಅವಲಂಬನೆಗೊಂಡಿದ್ದ ಗ್ಯಾಸ್ ಸಿಲಿಂಡರ್ ಈಗ ಕೈಗೂಡದಂತಾಗಿದೆ. ಇದರ ಪರಿಣಾಮವಾಗಿ, ದಶಕಗಳಿಂದ ಮರೆಯಾಗಿದ್ದ ಕಟ್ಟಿಗೆ ಒಲೆಗಳು ಮತ್ತೆ ಮನೆ, ಹೊಟೇಲ್ಗಳಲ್ಲಿ ಜೀವಂತವಾಗುತ್ತಿವೆ. ಮಹಿಳೆಯರು ಮತ್ತೆ ಹೊಗೆ ನಡುವೆ ಅಡುಗೆ ಮಾಡುವ ಪರಿಸ್ಥಿತಿ ಎದುರಾಗಿದೆ. ಇದು ಹಳೆಯ ನೆನಪುಗಳನ್ನೂ ಕಷ್ಟದ ದಿನಗಳನ್ನೂ ಒಟ್ಟಿಗೆ ತಂದು ನಿಲ್ಲಿಸಿದೆ.
ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಸಾಮಾನ್ಯವಾಗಿದ್ದ ಕಟ್ಟಿಗೆ ಒಲೆಗಳು, ಆಧುನಿಕ ಎಲ್ಪಿಜಿ ಬಳಕೆಯಿಂದ ಮರೆತು ಹೋಗಿದ್ದವು. ಆದರೆ ಇಂದಿನ ಸಂಕಷ್ಟ ಪರಿಸ್ಥಿತಿ ಜನರನ್ನು ಮತ್ತೆ ಅದೇ ಹಾದಿಯತ್ತ ಕರೆದೊಯ್ಯುತ್ತಿದೆ. “ಸೌಲಭ್ಯ ಹೆಚ್ಚಾದರೂ ಸಂಕಷ್ಟ ಬಂದಾಗ ನಮ್ಮ ಹಳೆಯ ಪದ್ಧತಿಗಳೇ ಕೈಹಿಡಿಯುತ್ತವೆ” ಎನ್ನುವ ಮಾತು ಮತ್ತೆ ಸಾಬೀತಾಗುತ್ತಿದೆ.
ಆಧುನಿಕತೆಗೆ ಪಾಠ ಹೇಳಿದ ಸಂಕಷ್ಟ
ಈ ಪರಿಸ್ಥಿತಿ ಆಧುನಿಕ ಜೀವನ ಶೈಲಿಯ ನಡುವೆಯೂ ನಮ್ಮ ಮೂಲ ಪದ್ಧತಿಗಳ ಮಹತ್ವವನ್ನು ಮತ್ತೆ ನೆನಪಿಸುತ್ತಿದೆ. ಸೌಲಭ್ಯಗಳು ಎಷ್ಟೇ ಬೆಳೆದರೂ, ಅವುಗಳ ಮೇಲೆ ಸಂಪೂರ್ಣ ಅವಲಂಬನೆ ಅಪಾಯಕಾರಿಯೇ ಎಂಬುದು ಈಗ ಅರ್ಥವಾಗುವಂತಾಗಿದೆ. ಹಿಂದೆಲ್ಲಾ ಪ್ರತಿಯೊಂದು ಮನೆಗಳಲ್ಲೂ ಕಟ್ಟಿಗೆ ಒಲೆಯಲ್ಲೆ ಅಡುಗೆ ಮಾಡಬೇಕಿತ್ತು.
ಬೆಳಿಗ್ಗೆ ಎದ್ದು ಮೊದಲ ಕೆಲಸವೇ ಒಲೆ ಹಚ್ಚುವುದು, ಅಲ್ಲಿಂದಲ್ಲೆ ದಿನದ ಚಟುವಟಿಕೆಗಳು ಆರಂಭವಾಗುತ್ತಿತ್ತು. ಕಾಡಿಗೆ ತೆರಳಿ ಕಟ್ಟಿಗೆ ತರುವುದು ಮನೆಯಲ್ಲಿದ್ದವರ ಅದರಲ್ಲೂ, ವಿಶೇಷವಾಗಿ ಮಹಿಳೆಯರ ದಿನನಿತ್ಯದ ಕೆಲಸವಾಗಿತ್ತು. “ಕಟ್ಟಿಗೆ ಇಲ್ಲ ಅಂದರೆ ಊಟ ಇಲ್ಲ” ಎನ್ನುವ ಪರಿಸ್ಥಿತಿ ಆಗಿನ ಕಾಲದಲ್ಲಿತ್ತು. ಮಳೆಗಾಲ ಬರುವ ಮೊದಲೆ ಕಟ್ಟಿಗೆ ಸಂಗ್ರಹ ಮಾಡಿ ಇಟ್ಟಿಕೊಳ್ಳುವುದು ಅತಿ ಮುಖ್ಯ ಕೆಲಸವಾಗಿತ್ತು. ಬೇಸಿಗೆಯಲ್ಲೇ ಕಟ್ಟಿಗೆ ಒಣಗಿಸಿ, ತಿಂಗಳುಗಟ್ಟಲೆ ಬೇಕಾಗುವಷ್ಟು ಸಂಗ್ರಹ ಮಾಡಿಕೊಳ್ಳುತ್ತಿದ್ದರು.
ಇನ್ನು ಅಡುಗೆ ಮಾಡುವ ಪರಿಸ್ಥಿತಿ ಸಹ ಸವಾಲಿನಿಂದ ಕೂಡಿತ್ತು. ಹೊಗೆ ತುಂಬಿದ ಅಡುಗೆಮನೆಯಲ್ಲಿ ಗಂಟೆಗಟ್ಟಲೆ ಕುಳಿತು ಅಡುಗೆ ಮಾಡಬೇಕಾಗುತ್ತಿತ್ತು. ಕಣ್ಣಿಗೆ ಉರಿ, ಕಣ್ಣೀರಾಗುವುದು, ಕೆಮ್ಮು ಹಾಗೂ ಉಸಿರಾಟದ ತೊಂದರೆಗಳು ಸಾಮಾನ್ಯವಾಗಿತ್ತು. ಆದರೂ, ಆ ಕಾಲದ ಹಿರಿಯರು ಇದನ್ನೇ ಜೀವನದ ಭಾಗವಾಗಿ ಒಪ್ಪಿಕೊಂಡಿದ್ದರು.“ಅದು ಕಷ್ಟ ಅಂತ ಅನಿಸೋದೇ ಇರ್ಲಿಲ್ಲ, ಅದೇ ನಮ್ಮ ಬದುಕು” ಜೀವನ ನಡೆಸಿದ್ದರು ಅಂದಿನ ಜನ. ಆದರೆ ಇದೀಗ ಗ್ಯಾಸ್ ಸಂಕಷ್ಟ ಮತ್ತೆ ಅದೇ ಪರಿಸ್ಥಿತಿಯನ್ನು ನೆನಪಿಸುತ್ತಿದೆ. ನಗರ ಹಾಗೂ ಹಳ್ಳಿಗಳಲ್ಲಿಯೂ ಜನ ಕಟ್ಟಿಗೆ ಒಲೆ ಬಳಸಲು ಪ್ರಾರಂಭಿಸಿದ್ದಾರೆ. ಆದರೆ ಇಂದಿನ ಪೀಳಿಗೆಗೆ ಇದು ಹೊಸ ಅನುಭವಾಗುವಂತೆ ಮಾಡಿದೆ
ಒಟ್ಟಾರೆ, ಹಳ್ಳಿ ಬದುಕಿನ ಅಡಿಪಾಯವೇ ಶ್ರಮ, ಸಹನೆ ಮತ್ತು ಪ್ರಕೃತಿಯ ಮೇಲೆ ನಂಬಿಕೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಗ್ಯಾಸ್ ಇಲ್ಲದ ಕಾಲದಲ್ಲೂ ಬದುಕು ನಿಂತಿರಲಿಲ್ಲ — ಕಟ್ಟಿಗೆ ಒಲೆ ಹೊಗೆಯಲ್ಲೇ ಜೀವನ ಸಾಗುತ್ತಿತ್ತು ಎಂಬುದು ಇಂದಿನ ಪರಿಸ್ಥಿತಿಯಲ್ಲಿ ಮತ್ತೆ ಸಾಬೀತಾಗುತ್ತಿದೆ.
ಇದನ್ನೂ ಓದಿ/ ತೈಲ ಸಂಸ್ಕರಣಾ ಘಟಕಗಳ ಮೇಲೆ ಡ್ರೋನ್ ದಾಳಿ : ಭಾರತಕ್ಕೆ ಇಂಧನ ತುರ್ತು ಪರಿಸ್ಥಿತಿ ಭೀತಿ..!


