ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಕರಾವಳಿ ಉತ್ಸವದ ವೇದಿಕೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಹೊನ್ನಾವರದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಪ್ರಸ್ತಾಪ ಮಾಡಿಲ್ಲ ಎಂದು ಸಚಿವರು ಗುರುಗಳ ಸಮ್ಮುಖದಲ್ಲೇ ತಮ್ಮ ನಿಲುವು ಸ್ಪಷ್ಟಪಡಿಸಿದ್ದರೂ ಕೂಡ ಬೈಲೂರಿನ ಮಾಸ್ತಪ್ಪ ನಾಯ್ಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸಚಿವರ ತೇಜೋವಧೆಗೆ ಮುಂದಾಗಿರುವುದು ಖಂಡನೀಯ ಎಂದು ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.

ಭಟ್ಕಳದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಶರವಾತಿ ಪಂಪ್ಡ್ ಸ್ಟೋರೇಜ್ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಡ ಹೇರಲು ಪ್ರತಿಭಟನೆ ನಡೆಸಲಾಗಿತ್ತು. ಆದರೆ ಸಭೆಯ ದಿಕ್ಕನ್ನು ತಪ್ಪಿಸಲು ಮಾಸ್ತಪ್ಪ ನಾಯ್ಕ ತನ್ನ ಸುಳ್ಳು ಹೇಳುವ ಚಾಳಿಯನ್ನು ಮುಂದುವರೆಸಿರುವುದು ಖೇದಕರ ಎಂದು ಅವರು ಹೇಳಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಿ ಪಡೆಯುವ ಪ್ರಚಾರ ಶಾಶ್ವತವಾಗುವುದಿಲ್ಲ. ಸಚಿವ ಮಂಕಾಳ ವೈದ್ಯ ದಶಕಗಳ ಕಾಲ ಜನಸೇವೆ ಮಾಡಿ ಜನರ ವಿಶ್ವಾಸ ಗಳಿಸಿದ್ದಾರೆ. ಇಂತಹ ಆರೋಪಗಳಿಂದ ಅವರ ಗೌರವಕ್ಕೆ ಕುಂದು ತರಲು ಸಾಧ್ಯವಿಲ್ಲ ಎಂದು ಗೋವಿಂದ ನಾಯ್ಕ ಹೇಳಿದರು.

ಸಚಿವರು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸುವ ಮಾಸ್ತಪ್ಪ ನಾಯ್ಕ, ತಮ್ಮದೇ ಪಕ್ಷದ ಅಧೀನದಲ್ಲಿರುವ ಇಡಿ, ಸಿಬಿಐ ಅಥವಾ ಇತರೆ ತನಿಖಾ ಸಂಸ್ಥೆಗಳಿಗೆ ದೂರು ನೀಡಿ ತನಿಖೆ ನಡೆಸುವ ಧೈರ್ಯ ತೋರಲಿ. ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಅವರು ಸವಾಲು ಹಾಕಿದರು.

ಭಟ್ಕಳ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ಕಾರವಾರದ ಶಾಸಕ ಸತೀಶ ಸೈಲ್ ಅವರ ಕಚೇರಿಯಲ್ಲಿ ಪತ್ರಕರ್ತರು ಶರಾವತಿ ಪಂಪ್ಡ್ ಸ್ಟೋರೇಜ್ ಕುರಿತು ಕೇಳಿದ ಪ್ರಶ್ನೆಗೆ ಡಿಸಿಎಂ ಮಾತನಾಡಿದ್ದು ನಿಜ. ಒಂದು ರಾಜ್ಯದ ಉಪಮುಖ್ಯಮಂತ್ರಿಗಳು ಮಾದ್ಯಮದ ಮುಂದೆ ಹೇಳಿಕೆ ನೀಡುವಾಗ ಅವರದೆ ಸರ್ಕಾರದ ಸಚಿವ ಮಧ್ಯದಲ್ಲಿ ವಿರೋಧ ವ್ಯಕ್ತಪಡಿಸುವುದು ಸಂಪ್ರದಾಯವಲ್ಲ. ಆಕ್ಷಣದಲ್ಲಿ ಸಚಿವರು ಸುಮ್ಮನಿದ್ದರೂ ಸುದ್ದಿಗೋಷ್ಠಿ ಮುಗಿದ ಬಳಿಕ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ, ಭಿಮಣ್ಣ ನಾಯ್ಕ ಸೇರಿದಂತೆ ಇತರ ಶಾಸಕರೊಂದಿಗೆ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದೇ ಧೈರ್ಯದಿಂದ ಸಚಿವರು ಹೊನ್ನಾವರದಲ್ಲಿ ನಡೆದ ಹೋರಾಟದಲ್ಲಿ ಸದನದಿಂದ ಹೊರಬಂದು ಗುರುಗಳ ಸಮ್ಮುಖದಲ್ಲೇ ತುಂಬಿದ ಸಭೆಯಲ್ಲಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಮಾಸ್ತಪ್ಪ ನಾಯ್ಕ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ಸಚಿವ ಮಂಕಾಳ ವೈದ್ಯ ನುಡಿದಂತೆ ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತಂದಿದ್ದು, ತಮ್ಮ ಕ್ಷೇತ್ರದಲ್ಲೂ ಶೀಘ್ರದಲ್ಲೇ ಘೋಷಣೆ ಮಾಡಲಿದ್ದಾರೆ. ಈಗಾಗಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತಂತೆ ಪ್ರಯತ್ನಗಳು ಮುಂದುವರೆದಿವೆ ಎಂದು ಹೇಳಿದರು.

ಭಟ್ಕಳ ಮಹಿಳಾ ಬ್ಲಾಕ್ ಅಧ್ಯಕ್ಷೆ ನಯನಾ ನಾಯ್ಕ ಮಾತನಾಡಿ, ಮಾಸ್ತಪ್ಪ ನಾಯ್ಕ ಅವರಂತವರು ನಕಲಿ ಐಡಿ ಸೃಷ್ಟಿಸಿ ಮಹಿಳೆಯರ ತೇಜೋವಧೆಗೆ ಮುಂದಾಗುತ್ತಿದ್ದಾರೆ. ಮಹಿಳೆಯರು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಾಲಿಡದಂತೆ ಮಾಡಲು ಇಂತಹ ಕೃತ್ಯಗಳಿಗೆ ಮುಂದಾಗುವುದು ಖಂಡನೀಯ ಎಂದು ಹೇಳಿದರು. ಮಂಕಿ ಬ್ಲಾಕ್ ಅಧ್ಯಕ್ಷೆ ಉಷಾ ನಾಯ್ಕ ಮಾತನಾಡಿ, ಯಾವುದೆ ಮಹಿಳೆಯರ ಕುರಿತು ನಕಲಿ ಐಡಿ ಬಳಸಿ ತೇಜೋವಧೆ ಮಾಡುವ ಬದಲು ನೇರವಾಗಿ ರಾಜಕೀಯ ಮಾಡಲಿ. ಮುಂದೆಯೂ ನಕಲಿ ಐಡಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಿದರೆ ಸಹಿಸಲಾಗುವುದಿಲ್ಲ. ಮಹಿಳೆಯರ ಪರವಾಗಿ ಇದಕ್ಕೆ ತಕ್ಕ ಉತ್ತರ ನೀಡುತ್ತೆವೆ ಎಂದು ಕಠಿಣ ಎಚ್ಚರಿಕೆ ನೀಡಿದರು.

ಇದನ್ನೂ ಓದಿ/ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ: ಮೂವರು ಗಂಭೀರ