ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಸಮಾಜ ಸೇವೆಯೇ ಜೀವನದ ಧ್ಯೇಯವಾಗಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ತಾಲೂಕಿನ ಹಟ್ಟಿಕೇರಿಯ ಮಾವಿನಕೇರಿ ನಿತ್ಯಾನಂದ ರತ್ನಾಕರ ನಾಯ್ಕ ಅವರು ತಮ್ಮ ಕಾರ್ಯಗಳಿಂದ ಕಾರವಾರ–ಅಂಕೋಲಾ ಭಾಗದ ಜನರ ವಿಶ್ವಾಸ ಗೆದ್ದಿರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಜನ್ಮದಿನದ ಸಂಭ್ರಮವನ್ನೂ ಸೇವೆಯ ಮೂಲಕ ಆಚರಿಸಿಕೊಂಡ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಇದೀಗ ಜನಮನ ಸೆಳೆಯುತ್ತಿದೆ.

ಅವರ್ಸಾದ ಶ್ರೀ ಕಾತ್ಯಾಯನಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪ್ 5 ಸ್ಥಾನ ಪಡೆದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಅಗತ್ಯವಾದ ಪಠ್ಯ ಪುಸ್ತಕಗಳಿಗಾಗಿ ಆರ್ಥಿಕ ಸಹಾಯ ನೀಡುವುದಾಗಿ ನಿತ್ಯಾನಂದ ನಾಯ್ಕ ಘೋಷಣೆ ಮಾಡಿದ್ದಾರೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉತ್ತಮವಾಗಿ ಬೆಳೆಯಬೇಕು, ಅವರಿಗೆ ಉತ್ತೇಜನ ಸಿಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಶ್ರಮಜೀವಿಯಾಗಿರುವ ನಿತ್ಯಾನಂದ ನಾಯ್ಕ ಅವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನೆರವು ನೀಡುತ್ತಾ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೆರವು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕೈಲಾದ ಸಹಾಯ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ, ಧಾರ್ಮಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆಂಬಲ ನೀಡುವ ಮೂಲಕ ಅವರು ಜನರ ಮಧ್ಯೆ ವಿಶ್ವಾಸಾರ್ಹ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಕಾರವಾರ–ಅಂಕೋಲಾ ಭಾಗದಲ್ಲಿ ಬಸ್ ಸೌಲಭ್ಯ ಸಮಸ್ಯೆಗಳ ಕುರಿತು ನಿರಂತರವಾಗಿ ಹೋರಾಟ ನಡೆಸಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಕಾರವಾರದಿಂದ ಅಂಕೋಲಾ ಕಡೆ ತೆರಳಲು ಬಸ್ ಸೌಲಭ್ಯ ಇಲ್ಲದ ಸಂದರ್ಭಗಳಲ್ಲಿ ತಮ್ಮದೇ ಸ್ವಂತ ಟೆಂಪೋದಲ್ಲಿ ಹಿರಿಯ ನಾಗರಿಕರು ಹಾಗೂ ಮಹಿಳೆಯರನ್ನು ಸುರಕ್ಷಿತವಾಗಿ ತಲುಪಿಸುವ ಸೇವೆ ಅವರ ಮಾನವೀಯತೆ ಮತ್ತು ಸಮಾಜಮುಖಿ ಮನೋಭಾವಕ್ಕೆ ಉದಾಹರಣೆಯಾಗಿದೆ.

ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅವರು ಟೆಂಪೋ ಚಾಲಕರ ಯೂನಿಯನ್ ಅಧ್ಯಕ್ಷರಾಗಿ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಪಡೆದಿರುವ ಜನಶಕ್ತಿ ವೇದಿಕೆ ಸಂಘಟನೆಯ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದಾರೆ. ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಹಲವು ಸಂಘ–ಸಂಸ್ಥೆಗಳು ಈಗಾಗಲೇ ಸನ್ಮಾನಿಸಿ ಗೌರವಿಸಿವೆ.

ಸಾಮಾನ್ಯ ಶ್ರಮಜೀವಿಯಾಗಿದ್ದರೂ ಸಮಾಜದ ಒಳಿತಿಗಾಗಿ ಸದಾ ಮುಂಚೂಣಿಯಲ್ಲಿ ನಿಲ್ಲುವ ನಿತ್ಯಾನಂದ ನಾಯ್ಕ ಅವರಂತಹ ವ್ಯಕ್ತಿತ್ವಗಳಿಗೆ ಭವಿಷ್ಯದಲ್ಲಿ ರಾಜಕೀಯ ಪ್ರತಿನಿಧಿತ್ವ ದೊರೆತು ಹೆಚ್ಚಿನ ಅವಕಾಶ ಸಿಗಲಿ ಎಂಬುದು ಕಾರವಾರ–ಅಂಕೋಲಾ ಭಾಗದ ಜನರ ಆಶಯವಾಗಿದೆ.

ಇದನ್ನೂ ಓದಿ/ಗ್ಯಾಸ್ ಕೊರತೆ : ಕಾರವಾರ ಹೊಟೇಲ್‌ಗಳಿಗೆ ಸಂಕಷ್ಟ – ಚೈನೀಸ್, ರೊಟ್ಟಿ ಸ್ಟಾಪ್..!