ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ ಪ್ರತಿ ವರ್ಷ ನೀಡಲಾಗುವ ಶಾಮರಾವ್ ದತ್ತನಿಧಿ ಹಾಗೂ ಅಜ್ಜೀಬಳ ಪ್ರಶಸ್ತಿಗೆ ಜಿಲ್ಲೆ ಹಿರಿಯ ಪತ್ರಕರ್ತರಾದ ಶೈಲಜಾ ಗೋರ್ನಮನೆ, ದೀಪಕ್ಕುಮಾರ್ ಶೇಣ್ವಿ ಅವರು ಆಯ್ಕೆಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025ನೆ ಸಾಲಿನ ವಾರ್ಷಿಕ ದತ್ತಿನಿಧಿ ಪ್ರಶಸ್ತಿಯನ್ನು ಸಂಘದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಜೂನ್ 1 ರಂದು ಶಿರಸಿಯಲ್ಲಿ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಶಾಮರಾವ್ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಶಿರಸಿಯ ಶೈಲಜಾ ಗೋರ್ನಮನೆ ಹಾಗೂ ಅಜ್ಜೀಬಳ ದತ್ತಿನಿಧಿ ಪ್ರಶಸ್ತಿಗೆ ಕಾರವಾರದ ಹಿರಿಯ ಪತ್ರಕರ್ತ ದೀಪಕ್ಕುಮಾರ್ ಶೇಣ್ವಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜುಲೈ ೧ರಂದು ಶಿರಸಿಯಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ತಿಳಿಸಿದ್ದಾರೆ.
ಶೈಲಜಾ ಗೋರ್ನಮನೆ ಕಳೆದ 28 ವರ್ಷಗಳಿಂದ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು ೧೯೯೭ರಲ್ಲಿ ಧ್ಯೇಯನಿಷ್ಠ ಪತ್ರಕರ್ತದ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶಿಸಿ, 1999 ಉದಯ ಟಿವಿ ಪ್ರತಿನಿಧಿಯಾಗಿ ಕೆಲಸ ಆರಂಭಿಸಿ, ಕರ್ನಾಟಕದಲ್ಲಿ ಕನ್ನಡ ದೃಶ್ಯಮಾಧ್ಯಮದ ಗ್ರಾಮೀಣ ಭಾಗದ ಮೊಟ್ಟಮೊದಲ ಮಹಿಳಾ ವರದಿಗಾರ್ತಿ ಹಾಗೂ ಕೆಮರಾ ಪರ್ಸನ್ ಆಗಿ ಕೆಲಸ ಮಾಡಿದ ದಾಖಲೆಯೊಂದಿಗೆ ಎರಡು ದಶಕಗಳ ಕಾಲ ವರದಿಗಾರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. 2017 ರಿಂದ ರಾಷ್ಟ್ರೀಯ ವಾಹಿನಿಯಾದ ಇಂಡಿಯಾ ಟುಡೆ ಮತ್ತು ಆಜ್ತಕ್ ಚಾನಲ್ಗಳಲ್ಲಿ ವರದಿಗಾರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿಬಿಸಿ ವಾಹಿನಿಯ ವಿಶೇಷ ಸಾಕ್ಷ್ಯಚಿತ್ರನಿರ್ಮಾಣ ತರಬೇತಿ ಪಡೆದು ಬಿಬಿಸಿ ದೇಶದಮಟ್ಟದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪಾಲ್ಗೊಂಡು, ಇವರು ತಯಾರಿಸಿದ್ದ ” Gone away Lakes”ಎನ್ನುವ ಸಾಕ್ಷ್ಯಚಿತ್ರಕ್ಕೆ ದೇಶದ ಮಟ್ಟದಲ್ಲಿ ೬ ನೆಯ ಸ್ಥಾನ ಪಡೆದುಕೊಂಡಿದ್ದು ವಿಶೇಷ.
ಸಿದ್ಧಿ, ಕುಣಬಿ, ಗೌಳಿ, ಕುಂಬ್ರಿ ಮರಾಠಾ, ಗೊಂಡ ಮುಂತಾದ ವನವಾಸಿಗಳು ಹಾಗೂ ಪಶ್ಚಿಮಘಟ್ಟಗಳ ವೈಶಿಷ್ಟ್ಯಗಳ ಕುರಿತು ಹದಿನೈದಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳ ಪ್ರಸ್ತುತಿ. ಕೇರಳ ರಾಜ್ಯದ ’low budget’ ಕುರಿತು ಸಾಕ್ಷ್ಯಚಿತ್ರ, ಶ್ರೀಲಂಕಾದ ಮಹಿಳಾ ಸಬಲೀಕರಣದ ’ಪೂ ಪೇಪರ್ ಇಂಡಸ್ಟ್ರೀ” ಕುರಿತು ಸಾಕ್ಷ್ಯ ಚಿತ್ರಗಳನ್ನು ಪ್ರಸ್ತುತಪಡಿಸಿದ್ದಾರೆ.
ಯಕ್ಷಗಾನ ಅಕಾಡೆಮಿಗಾಗಿ,” ತಾಳಮದ್ದಳೆಗಳಲ್ಲಿ ಪುರಾಣಗಳ ಪುನಾಸೃಷ್ಟಿ” ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ. ರಾಜ್ಯದ ICSSR ಸಂಸ್ಥೆಯ ಮಾರ್ಗದರ್ಶನ ಮತ್ತು ಪರಿಶೀಲನಾ ಸಮಿತಿ ಹಾಗೂ ರಾಜ್ಯ ಪ್ರವಾಸೋದ್ಯ್ಯಮದ ಜಿಲ್ಲಾ ಅಧ್ಯಯನ ಸಮಿತಿಗೆ ಇವನ್ನು ನೇಮಕ ಮಾಡಲಾಗಿದೆ. ಜೊತೆಗೆ ವನಸ್ತ್ರೀ, ಪ್ರಕೃತಿ, ಸಾಂತ್ವನ, ಸೃಷ್ಟಿ ಕಲಾಪ ಮುಂತಾದ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಲ್ಲದೇ ನಿಸರ್ಗಮನೆಯಲ್ಲಿ ಆಪ್ತಸಮಾಲೋಚಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಟಲಿ ದೇಶದಲ್ಲಿನ “ಸ್ಲೋ ಫುಡ್ ಕಾನ್ಫರೆನ್ಸ್”ನಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದಾರೆ. ಅನೇಕ ಪತ್ರಿಕೆಗಳಲ್ಲಿನ ಕಥೆ, ಲೇಖನಗಳಿಗಾಗಿ ಗೌರವ, ಬಹುಮಾನಗಳು ಸಂದಿವೆ. ದೇಶದ ಹಲವು ರಾಜ್ಯಗಳಲ್ಲಿ ನಡೆದ ಅನೇಕ ವಿಚಾರಗೋಷ್ಠಿಗಳಲ್ಲಿ ಅಧ್ಯಯನ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಪ್ರಶಸ್ತಿಗಳು: ಪತ್ರಿಕಾರಂಗದಲ್ಲಿ “ಡಿವಿಜಿ ಪ್ರಶಸ್ತಿ, ಜಿ ಎಸ್ ಹೆಗಡೆ ಅಜ್ಜೀಬಳ ಪ್ರಶಸ್ತಿ’ ಸಂದಿವೆ. ಅನೇಕ ಸಂಘ ಸಂಸ್ಥೆಗಳಿಂದಲೂ ಗೌರವ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಬಿಸಿಸಿಯಿಂದ environment special journalist’ಎನ್ನುವ ಗೌರವ ಪ್ರಶಸ್ತಿ. ಟಿಬೆಟ್ ಪ್ರಧಾನಿಯಿಂದ ’ನಮಸ್ತೆ ಕರ್ನಾಟಕ’ ಗೌರವ ಸನ್ಮಾನ. ವನಸ್ತ್ರೀ ಸಂಸ್ಥೆಯ ಪ್ರತಿನಿಧಿಯಾಗಿ ರಾಷ್ಟ್ರಪತಿಗಳಿಂದ “ನಾರಿಶಕ್ತಿ ಸಮ್ಮಾನ್” ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಎಲ್ಲ ಪರಿಸರ ಚಳವಳಿಗಳಲ್ಲಿ ಸಕ್ರೀಯರಾಗಿದ್ದಲ್ಲದೆ, ದೇವರ ಕಾಡುಗಳ ಅಧ್ಯಯನ ಮಾಡಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ.
ಜಿ.ಎಸ್. ಹೆಗಡೆ ಅಜ್ಜೀಬಳ ಪ್ರಶಸ್ತಿಗೆ ಆಯ್ಕೆಯಾದ ದೀಪಕ್ಕುಮಾರ ಶೇಣ್ವಿ ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾದವರಾಗಿದ್ದು,. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಜರ್ನಲಿಸಂ ಅಂಡ್ ಮಾಸ್ ಕಮ್ಯುನಿಕೇಶನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಇವರು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಸಂಘಟನೆಗಳ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ಕಾರವಾರ ಆಕಾಶವಾಣಿಯಲ್ಲಿ ಕಳೆದ 33ವರ್ಷಗಳಿಂದ ಉದ್ಘೋಷಕರಾಗಿ ಕೆಲಸ ಮಾಡುತ್ತಿದ್ದಾರೆ.
ದ ಹಿಂದೂ’ ಇಂಗ್ಲೀಷ ದಿನ ಪತ್ರಿಕೆಯ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರವಾರದಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ಆನಂತರ ಸುಮಾರು ೧೮ ವರ್ಷಗಳಿಂದ ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯ ದಿ ಹಂಡ್ರೆಡ್ ಒನ್ ರಿಪೋರ್ಟರ್ಸ್ ಎಂಬ ಸುದ್ದಿ ಸಂಸ್ಥೆಯಲ್ಲಿ ಸುಮಾರು 4ವರ್ಷ ನ್ಯೂಸ್ ಕಾಂಟ್ರಿಬ್ಯೂಟರ್ ಆಗಿ ಕಾರ್ಯನಿರ್ವಹಿಸಿದ್ದು, ಅವರ ರಾಜಕೀಯ ವಿಶ್ಲೇಷಣೆಗಳು ಕೋರಿಯನ್ ಟೈಮ್ಸ್ ಸಹಿತ ಇಂಗ್ಲೆಂಡ್, ಜರ್ಮನಿ, ದಕ್ಷಿಣ ಕೋರಿಯಾದ ಸೇರಿದಂತೆ ಹಲವು ವಿದೇಶಿ ಪತ್ರಿಕೆಗಳಲ್ಲಿ ಹಾಗೂ ಭಾರತೀಯ ಸುದ್ದಿ ಸಂಸ್ಥೆಯಾದ ಫಸ್ಟ್ಪೋಸ್ಟ್ನಲ್ಲಿ ಪ್ರಕಟವಾಗಿದ್ದು ಅವರ ಹೆಗ್ಗಳಿಕೆ.
ಸುಮಾರು 25 ವರ್ಷ ಇಂಗ್ಲೀಷ್ ಪತ್ರಿಕೋದ್ಯಮದಲ್ಲಿದ್ದರೂ ದೀಪಕ ಅವರು ಕಾರವಾರದಲ್ಲಿ ತಮ್ಮದೇ ಸಂಪಾದಕತ್ವದಲ್ಲಿ ‘ಕೊಂಕಣವಾಹಿನಿ’ ಎಂಬ ಕನ್ನಡ ದಿನಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ. ರಾಜ್ಯ ಕೊಂಕಣಿ ಅಕಾಡೆಮಿ ಸಹಿತ ಹಲವು ಸಂಘ ಸಂಸ್ಥೆಗಳಿಂದ ಇವರು ಪುರಸ್ಕೃತರಾಗಿದ್ದಾರೆ.
ಇದನ್ನೂ ಓದಿ