ಅಹಮದಾಬಾದ್: ಅಹಮದಾಬಾದ್: ಬಹು ನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ಗಾಗಿ ವೇದಿಕೆ ಸಿದ್ಧವಾಗಿದೆ. ಈ ಬಾರಿ ಕ್ರಿಕೆಟ್ ಹಬ್ಬದ ಕಿರೀಟ ಯಾರಿಗೆ ಸೇರಲಿದೆ ಎಂಬ ಕುತೂಹಲ ಮಂಗಳವಾರ ಸ್ಪಷ್ಟವಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ತಲೆದೆಡಿಸಲು ಸಜ್ಜಾಗಿವೆ. ಶ್ರೇಷ್ಠ ಪೈಪೋಟಿ ಕಾಣುವ ನಿರೀಕ್ಷೆಯಿದೆ.
ರಾಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ಈ ಟೂರ್ನಿಯಾದ್ಯಂತ ಉತ್ತಮ ಪ್ರದರ್ಶನ ನೀಡಿದ ತಂಡವಾಗಿದ್ದು, ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿತ್ತು. ಪಂಜಾಬ್ ವಿರುದ್ಧದ ಕ್ವಾಲಿಫೈಯರ್-1 ಗೆದ್ದ ಬಳಿಕ ನೇರವಾಗಿ ಫೈನಲ್ಗೆ ಪ್ರವೇಶಿಸಿತು. ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ ಮುಂಚೂಣಿಯಲ್ಲಿ ಇತ್ತು. ಆದರೆ ಕ್ವಾಲಿಫೈಯರ್-1ರಲ್ಲಿ ಆರ್ಸಿಬಿಗೆ ಸೋತು, ಕ್ವಾಲಿಫೈಯರ್-2ರಲ್ಲಿ ಮುಂಬೈ ಮೇಲೆ ಜಯ ಸಾಧಿಸಿ ಟ್ರೋಫಿ ಫೈನಲ್ಗೆ ದಾಟಿದೆ.
ರೋಮಾಂಚಕ ಪೈಪೋಟಿ ನಿರೀಕ್ಷೆ: ಟೂರ್ನಿಯಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ, ಎರಡೂ ತಂಡಗಳು ಶಕ್ತಿಶಾಲಿಯಾಗಿವೆ. ಆದರೆ ಆರ್ಸಿಬಿಯ ಬಲವು ಕೆಲ ಆಟಗಾರರ ಮೇಲೆ ಅವಲಂಬಿಸದೆ ಸಂಘಟಿತ ಆಟವಾಡುತ್ತಿರುವುದು, ಪಂಜಾಬ್ ಬಲವು ಅವರ ದಿಟ್ಟ ಬ್ಯಾಟಿಂಗ್ ಆಗಿದೆ. ಈ ಕಾರಣದಿಂದಾಗಿ ಫೈನಲ್ ಕೂಡ ರೋಮಾಂಚಕವಾಗುವ ನಿರೀಕ್ಷೆಯಿದೆ.
ಈ ಹಿಂದೆ ಆರ್ಸಿಬಿ ಕೆಲವೇ ಆಟಗಾರರ ಮೇಲೆ ಅವಲಂಬಿಸಿತ್ತು. ಆದರೆ ಈ ಬಾರಿ ಪ್ರತಿ ಆಟಗಾರನು ತನ್ನ ಶ್ರೇಷ್ಠತೆ ಪ್ರದರ್ಶಿಸುತ್ತಿದ್ದಾನೆ. ವಿರಾಟ್ ಕೊಹ್ಲಿ (614 ರನ್) ಫೈನಲ್ನಲ್ಲಿ ಅಪರೂಪದ ಆಟ ತೋರಬೇಕಿದೆ. ಫಿಲ್ ಸಾಲ್ಟ್ (387 ರನ್) ತಂಡದ ಪ್ಲಸ್ ಪಾಯಿಂಟ್. ಕನ್ನಡಿಗರು ಮಯಾಂಕ್ ಅಗರವಾಲ್ ಹಾಗೂ ಜಿತೇಶ್ ಶರ್ಮಾ ನಿರ್ಣಾಯಕ ಹಂತದಲ್ಲಿ ಸಿಡಿಲು ಆಟವಾಡಿ ಗಮನ ಸೆಳೆದಿದ್ದಾರೆ, ಫೈನಲ್ನಲ್ಲೂ ತಮ್ಮ ಪ್ರಭಾವ ತೋರಲಿದ್ದಾರೆ. ಗಾಯಗೊಂಡ ಟಿಮ್ ಡೇವಿಡ್ ಲಭ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ. ರೊಮಾರಿಯೋ ಶೆಪರ್ಡ್, ಕ್ರುನಾಲ್ ಪಾಂಡ್ಯ ಅವರ ಆಲ್ರೌಂಡ್ ಆಟ ತಂಡಕ್ಕೆ ಪ್ರಮುಖವಾಗಿದೆ.
ಬೌಲಿಂಗ್ ಶಕ್ತಿ: ಈ ಬಾರಿಗೆ ಆರ್ಸಿಬಿಯ ಯಶಸ್ಸಿಗೆ ಬೌಲಿಂಗ್ ಶಕ್ತಿ ಪ್ರಮುಖ ಕಾರಣ. ಜೋಷ್ ಹೇಜಲ್ವುಡ್ (21 ವಿಕೆಟ್) ಎದುರಾಳಿಗಳಿಗೆ ತಲೆನೋವಾಗಿದ್ದರೆ, ಭುವನೇಶ್ವರ್ (15), ಕ್ರುನಾಲ್ ಪಾಂಡ್ಯ (15), ಯಶ್ ದಯಾಳ್ (12), ಸುಯಾಷ್ ಶರ್ಮಾ (8) ಸಂಯೋಜಿತ ದಾಳಿ ನಡೆಸುತ್ತಿದ್ದಾರೆ.
ಇನ್ನು ಪಂಜಾಬ್ ತಂಡವು ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ. ಕ್ವಾಲಿಫೈಯರ್ 2ರಲ್ಲಿ ಮುಂಬೈನ ವಿರುದ್ಧ ಶ್ರೇಯಸ್ ಅಯ್ಯರ್ ನೀಡಿದ ಪ್ರದರ್ಶನ ಆರ್ಸಿಬಿ ಬೌಲರ್ಗಳಿಗೆ ಭೀತಿಯಾಯಕವಾಗಿತ್ತು. ಪ್ರಭಸಿಮ್ರನ್, ಪ್ರಿಯಾಂಶ್ ಆರ್ಯಾ, ಜೋಷ್ ಇಂಗ್ಲಿಸ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯ್ನಿಸ್ ಕೂಡ ಸದ್ದು ಮಾಡುತ್ತಿದ್ದಾರೆ. ಗಾಯಗೊಂಡ ಚಹಲ್ ಇನ್ನೂ ಫಾರ್ಮ್ಗೂ ಮರಳಿಲ್ಲ. ಇದರಿಂದಾಗಿ ಅರ್ಷದೀಪ್, ಕೈಲ್ ಜೇಮಿಸನ್ ಹಾಗೂ ಕನ್ನಡಿಗ ವೈಷಾಖ್ ಮೇಲೆ ತಂಡ ಭರವಸೆ ಇಟ್ಟಿದೆ.