ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ಧಾರ್ಮಿಕ ಕಾರ್ಯಕ್ಕೆ ಉಳ್ಳವರು ಕೈಜೋಡಿಸಬೇಕೆಂದು ಶ್ರೀ ನಾರಾಯಣ ಗುರುಗಳೇ ಹೇಳಿದ್ದರಿಂದ ಎಲ್ಲರೂ ಧರ್ಮ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಹಾರಾಜ್ ಕರೆ ನೀಡಿದರು.

ಕುಮಟಾ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಮಹಾಮಂಡಲೇಶ್ವರ ಸದ್ಗುರು ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಹಾರಾಜ್ ಅವರು ಭಕ್ತರಿಂದ ಸಲ್ಲಿಸಲಾದ ಗೌರವ ಸಮರ್ಪಣೆಯನ್ನು ಸ್ವೀಕರಿಸಿ, ಆಶೀರ್ವಚನ ನೀಡಿದ ಶ್ರೀಗಳು,ಧರ್ಮ ಮತ್ತು ಧಾರ್ಮಿಕ ಕಾರ್ಯಕ್ರಮದ ಮಹತ್ವ ತಿಳಿಸಿದರು.ಚಾತುರ್ಮಾಸ್ಯದ ಬಗ್ಗೆ ವಿವರಿಸಿದ ಶ್ರೀಗಳು ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರೆರೇಪಿಸುವ ಸನ್ಮಾರ್ಗ ತೋರುವ ಕಾರ್ಯಕ್ಕೆ ಚಾತುರ್ಮಾಸ್ಯ ನಾಂದಿಯಾಗತ್ತೆ. ಸನ್ಯಾಸಿಗಳ ಸೇವೆ ಮಾಡುವುದು ಕೂಡ ಪುಣ್ಯದ ಕಾರ್ಯವಾಗಿದೆ. ಚಾತುರ್ಮಾಸ್ಯಕ್ಕೆ ಶ್ರೀರಾಮನ ಕೃಪೆ ಇರುವುದರಿಂದ ರಾಮ ಭಕ್ತರೇ ನಿಂತು ಎಲ್ಲವನ್ನು ನೆರವೇರಿಸುತ್ತಾರೆ.ಧರ್ಮ ಜಾಗೃತಿ ಕಾರ್ಯ, ಸಹೋದರತೆ,ಪ್ರೀತಿ, ಸ್ನೇಹ, ವಿಶ್ವಾಸ ಬೆಳೆಸುವ ಜೊತೆಗೆ ಮನುಷ್ಯದಲ್ಲಿ ಸಾತ್ವಿಕತೆಯ ಭಾವವನ್ನು ಚಾತುರ್ಮಾಸ್ಯ ಕಾರ್ಯಕ್ರಮ ಮೂಡುಸುತ್ತದೆ. ಈ ಬಾರಿ ಶ್ರೀರಾಮನ ಪ್ರೇರಣೆಯಂತೆ ಕುಮಟಾದ ಕೋನಳ್ಳಿಯ ಶ್ರೀವನದುರ್ಗ ದೇವಸ್ಥಾನದಲ್ಲಿ ಚಾತುರ್ಮಾಸ್ಯ ನಡೆಸಲು ನಮ್ಮೆಲ್ಲ ಭಕ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಈ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀರಾಮ ಸೇವಾ ಸಮಿತಿಯ ಜಿಲ್ಲಾ ಸಂಚಾಲಕ ಆರ್ ಜಿ ನಾಯ್ಕ ಮಾತನಾಡಿ, ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಕರ್ನಾಟಕದ ಮೊದಲ ಮಹಾಮಂಡಲೇಶ್ವರರಾಗಿ ಪಟ್ಟಾಭಿಷೇಕಗೊಂಡ ನಮ್ಮ ಕುಲಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಹಾರಾಜ್ ಮೊದಲ ಚಾತುರ್ಮಾಸ್ಯವನ್ನು ಕುಮಟಾದ ಕೋನಳ್ಳಿಯಲ್ಲಿ ಮಾಡಲು ಅವಕಾಶ ಲಭಿಸಿರುವುದು ನಮ್ಮೆಲ್ಲರ ಪುಣ್ಯ. ಶ್ರೀಗಳು ದೇಶದ & ಕಡೆಗಳಲ್ಲಿ ಮಠ ಸ್ಥಾಪಿಸುವ ಸಂಕಲ್ಪ ಮಾಡಿರುವ ಶ್ರೀಗಳು ಬಹುತೇಕ ಕಡೆಗಳಲ್ಲಿ ಮಠ ನಿರ್ಮಿಸುವ ಮೂಲಕ ತಮ್ಮ ಸಂಕಲ್ಪವನ್ನು ಪೂರೈಸುತ್ತಿರುವುದು ಅವರ ಶಕ್ತಿ ಮತ್ತು ಪ್ರಭಾವದ ಪ್ರತಿಕವಾಗಿದೆ. ಅಂಥ ಶ್ರೇಷ್ಠ ನಮ್ಮ ಸ್ವಾಮೀಜಿಯ ಸೇವೆ ಮಾಡುವ ಭಾಗ್ಯ ನಮ್ಮೆಲ್ಲರಿಗೆ ದೊರೆತ್ತಿದೆ. ಇದನ್ನು ಸದ್ವಿನಿಯೋಗ ಮಾಡಿಕೊಳ್ಳೋಣ ಎಂದರು.

ಶ್ರೀರಾಮ ಸೇವಾ ಸಮಿತಿಯ ಕುಮಟಾ ಅಧ್ಯಕ್ಷರಾದ ಎಚ್ ಆರ್ ನಾಯ್ಕ ಮಾತನಾಡಿ, ಶ್ರೀಗಳ ಆಶೀರ್ವಾದದ ಮೇರೆಗೆ ಕೋನಳ್ಳಿಯಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮ ನಡೆಸುವ ಕಾರ್ಯಕ್ಕೆ ಕೈ ಹಾಕಿದ್ದೇವೆ. ೪೫ ದಿನಗಳ ಕಾರ್ಯಕ್ರಮಕ್ಕೆ ಸುಮಾರು ಕೋಟಿ ರೂ. ವರೆಗೆ ಆರ್ಥಿಕ ನೆರವನ್ನು ಒಗ್ಗೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವೆಲ್ಲ ಸೇರಿ ಒಗ್ಗಟ್ಟಾಗಿ ಈ ಧರ್ಮ ಕಾರ್ಯವನ್ನು ನೆರವೇರಿಸೋಣ. ನಮ್ಮ ಎಲ್ಲ ಸಮಾಜಬಾಂಧವರು ಸಹಾಯ, ಸಹಕಾರ ನೀಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತ ನಾಗರಾಜ ನಾಯ್ಕರನ್ನು ಶ್ರೀಗಳು ಸನ್ಮಾನಿಸಿ,ಗೌರವಿಸಿದರು. ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ ದಂಪತಿ ಗುರುಗಳ ಪಾದ ಪೂಜೆ ನೆರವೇರಿಸಿದರು. ಬಳಿಕ ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆ ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಕಾಂಗ್ರೆಸ್ ಮುಖಂಡ ಮಂಜುನಾಥ ಎಲ್ ನಾಯ್ಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರತ್ನಾಕರ ನಾಯ್ಕ, ಉದ್ಯಮಿ ಮುರಳೀಧರ ಪ್ರಭು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಪ್ರಮುಖರಾದ ಹೊನ್ನಪ್ಪ ನಾಯಕ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಾಮಧಾರಿ ಸಮಾಜಬಾಂಧವರು ಇದ್ದರು.

ಇದನ್ನೂ ಓದಿ