ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಚುನಾವಣೆಗೆ ಖುದ್ದು ಉಪಸ್ಥಿತರಿಲ್ಲದ ವ್ಯಕ್ತಿಯ ಸಹಿಯನ್ನು ಫೋರ್ಜರಿ ಮಾಡಿ ಚುನಾವಣಾ ನಿಯಮವನ್ನು ಉಲ್ಲಂಘಿಸಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಹಕಾರಿ ಕ್ಷೇತ್ರಕ್ಕೆ ದ್ರೋಹ ಎಸಗಿದ ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕ (ಎ.ಆರ್) ಅಜೀತ್ ಶಿರಹಟ್ಟಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ, ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್. ರವಿಯವರು ಎ.ಆರ್. ಕಛೇರಿಯಲ್ಲಿ ಗಾಂಧಿ ಫೋಟೋ ಹಿಡಿದು ಧರಣಿ ನಡೆಸುತ್ತಿದ್ದಾರೆ.

ಹಿರಿಯ ಸಹಕಾರಿ ಪ್ರಮೋದ ಹೆಗಡೆ ಯಲ್ಲಾಪುರ ಅಧ್ಯಕ್ಷರು, ಕೆ.ವಿ. ನಾಯಕ ಅಂಕೋಲಾ ಉಪಾಧ್ಯಕ್ಷರಾಗಿರುವ 2019 ರಿಂದ ಅಸ್ತಿತ್ವಕ್ಕೆ ಬಂದ ಈ ಉ.ಕ. ಜಿಲ್ಲಾ ಸಹಕಾರಿ ಒಕ್ಕೂಟದ 19ನಿರ್ದೇಶಕರ ಹುದ್ದೆಗೆ ಚುನಾವಣೆ ನಡೆಯಬೇಕಿದ್ದು, 02.03.2025 ರ ವರೆಗೆ 19 ಜನ ನಾಮ ಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ನಿಗದಿಯಾಗಿದ್ದ 04.03.2025 ರ 03:00 ಗಂಟೆಯ ಒಳಗಾಗಿ 09 ಜನ ಮಾತ್ರ ಖುದ್ದು ಹಾಜರಾಗಿ ನಾಮ ಪತ್ರ ಹಿಂಪಡೆದಿದ್ದರು. ಆದರೆ ಎ.ಆರ್. ಅಜೀತ್ ಶಿರಹಟ್ಟಿಯವರು ನಾಮಪತ್ರ ಹಿಂಪಡೆಯದ, ಬೆಂಗಳೂರಿನಲ್ಲಿ ಅನಾರೋಗ್ಯದ ನಿಮಿತ್ತ ವಿಶ್ರಾಂತಿ ಪಡೆಯುತ್ತಿದ್ದ ಗಣೇಶ ಭಟ್ ಎಂಬವರು ಖುದ್ದು ಉಪಸ್ಥಿತರಿದ್ದು ನಾಮಪತ್ರ ಹಿಂಪಡೆದಿದ್ದಾರೆ.ಎಂದು ಪೋರ್ಜರಿ ದಾಖಲೆ ಸೃಷ್ಟಿಸಿ 10 ಜನ ಖುದ್ದು ನಾಮಪತ್ರ ಹಿಂಪಡೆದಿದ್ದಾರೆ ಎಂಬಂತೆ ಉಲ್ಲೇಖಿಸಿ ಒಕ್ಕೂಟಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ, ಆದೇಶ ಹೊರಡಿಸಿ ಅಧಿಕಾರ ದುರುಪಯೋಗ ಮಾಡಿದ್ದಾರೆ.

ಅಲ್ಲದೇ ಚುನಾವಣಾ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಸರಸ್ವತಿ ಎನ್.ರವಿಯವರು ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆಯಿಂದ ಶಿರಸಿ ಎ.ಆರ್.ಅಜೀತ್ ಶಿರಹಟ್ಟಿ ರವರನ್ನು ಭೇಟಿ ಮಾಡಿ ನಾಮಪತ್ರ ಹಿಂಪಡೆದವರ ಮಾಹಿತಿಯನ್ನು ಕೇಳಿದಾಗ 9 ಜನರೊಂದಿಗೆ ಗಣೇಶ ಭಟ್ ಎಂಬವರೂ ಸಹ ನನ್ನ ಎದುರಿಗೆ ಖುದ್ದು ಹಾಜರಾಗಿ ಸಹಿ ಮಾಡಿನಾಮ ಪತ್ರ ಹಿಂಪಡೆದಿದ್ದಾರೆ ಎಂದು ಸುಳ್ಳು ಹೇಳಿದರಲ್ಲದೇ ನೀವು ಏನು ಬೇಕಾದರೂ ಮಾಡಿಕೊಳ್ಳಿ, ನನ್ನ ಅಧಿಕಾರವನ್ನು ಪ್ರಶ್ನಿಸುವ ಅಧಿಕಾರ ನಿಮಗಿಲ್ಲ ಎಂದು ಗದರಿಸುತ್ತಾ, ನನಗೆ ಮೇಲಿನಿಂದ ಒತ್ತಡ ಇದೆ, ಈ ಕಾರಣಕ್ಕೆ ನಾನು ಹೀಗೆ ಆದೇಶ ಮಾಡಬೇಕಾಯಿತು, ನೀವು ಈ ಬಗ್ಗೆ ತಕರಾರು ಮಾಡಿದರೆ ಮುಂದೆ ನಿಮಗೂ ತೊಂದರೆಯಾಗಬಹುದು ಎಂದು ಧಮಕಿ ಹಾಕಿ ಸುಮಾರು 12:ಗಂಟೆಯ ಹೊತ್ತಿಗೆ ಕಛೇರಿಯಿಂದ ಹೊರನಡೆದಿದ್ದಾರೆಂದು ಧರಣಿ‌‌ ನಿರಂತರು ತಿಳಿಸಿದ್ದಾರೆ.

ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಈ ರೀತಿ ನಿಯಮ ಉಲ್ಲಂಘನೆ ಮಾಡುವುದು ಮಾಹಿತಿ ಕೇಳಿದರೆ ಧಮಕಿ ಹಾಕುವುದು ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಮಾಡಿದ ದೊಡ್ಡ ಅವಮಾನ. ಅಲ್ಲದೇ ಸಹಕಾರಿಗಳನ್ನು ತುಳಿಯುವ ಹುನ್ನಾರವಾಗಿರುವ ಕಾರಣದಿಂದ ಇಡೀ ಜಿಲ್ಲೆಯ, ರಾಜ್ಯದ ಹಿರಿಯ ಸಹಕಾರಿಗಳು, ಜನ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸರ್ಕಾರದ ಗಮನವನ್ನು ಸೆಳೆಯುವ ಉದ್ದೇಶದಿಂದ ಧರಣಿ ಕೂತಿದ್ದೇನೆ ಎಂದು ಹೇಳಿದ್ದಾರೆ.

ಎರಡು ಆದೇಶ ಹೊರಡಿಸಿ ಮೇಲಿನ ಒತ್ತಡ ಇದೆ ಎಂದ ಸಹಾಯಕ ನಿಬಂಧಕ:
ನಿನ್ನೆ ಮಾರ್ಚ್‌ 04ರಂದು 10 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಆದೇಶ ಹೊರಡಿಸಿ, ನಿನ್ನೆಯ ದಿನಾಂಕವನ್ನು ನಮೂದಿಸಿ ಮೇಲಿನಿಂದ ಒತ್ತಡ ಇದೆ ಈ ಕಾರಣಕ್ಕೆ 09 ಜನ ಮಾತ್ರ ಆಯ್ಕೆಯಾಗಿದ್ದಾರೆ ಎಂದು ಆದೇಶ ಹೊರಡಿಸಿದ ಎ.ಆರ್. ಅಜೀತ್ ಶಿರಹಟ್ಟಿರವರು ಮೇಲಿನ ಒತ್ತಡ ಯಾರದ್ದೆಂದು ಪ್ರಕಟಪಡಿಸಲಿ.

ಹಿರಿಯ ಸಹಕಾರಿಗಳು ಮಾತನಾಡಲಿ:
ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಆಗುತ್ತಿರುವ ಅನಾರೋಗ್ಯಕರ ಗುಂಪುಗಾರಿಕೆ, ಅಧಿಕಾರ ದುರುಪಯೋಗ ವಿರುದ್ಧ ಹಿರಿಯ ಸಹಕಾರಿಗಳು ಇಂತಹ ಕುತಂತ್ರದ ವಿರುದ್ಧ ಮಾತನಾಡಬೇಕು. ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕಿದೆ..

ಇದನ್ನೂ ಓದಿ