ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಶಿರಸಿ ಹೈಟೆಕ್ ಸರಕಾರಿ ಆಸ್ಪತ್ರೆ ವಿಚಾರಕ್ಕೆ ಸಂಬಂಧಿಸಿ ಜನವರಿ 13ರಂದು ಬೃಹತ್ ಮೆರವಣಿಗೆ ಮತ್ತು ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಸಾರ್ವಜನಿಕರಲ್ಲಿ ಮನವಿ ಮಾಡಿರುವ ಅವರು, ಇದು ಕೇವಲ ನನ್ನೊಬ್ಬನ ಹೋರಾಟವಲ್ಲ. ಯಾರ ವಿರುದ್ಧದ ಹೋರಾಟವಲ್ಲ. ಬದಲಾಗಿ ಕ್ಷೇತ್ರದ ಜನರ ಹಿತಕ್ಕಾಗಿ, ಅವರ ಆರೋಗ್ಯದ ಹಕ್ಕಿಗಾಗಿ, ಆಸ್ಪತ್ರೆಯ ಉಳಿವಿಗಾಗಿ ನಡೆಸುತ್ತಿರುವ ಹೋರಾಟವಾಗಿದೆ. ಪ್ರತಿಯೊಬ್ಬರಿಗೂ ಆಸ್ಪತ್ರೆಯ ಅನಿವಾರ್ಯತೆ, ಅವಶ್ಯಕತೆ ಇದ್ದೇ ಇರುತ್ತದೆ. ಹೈಟೆಕ್ ಆಸ್ಪತ್ರೆಯಾಗುವುದರಿಂದ ಭವಿಷ್ಯದಲ್ಲಿ ಉಚಿತವಾಗಿ ಹಾರ್ಟ್ ಆಪರೇಷನ್ ಮಾಡಿಸಿಕೊಳ್ಳಲು, ಎಂ.ಆರ್. ಐ ಸ್ಕ್ಯಾನ್, ಸಿಟಿ ಸ್ಕ್ಯಾನ್ ಉಚಿತವಾಗಿ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ. ಹಾಗಾಗಿ ಎಲ್ಲ ಸಾರ್ವಜನಿಕರೂ ಸಹ, ನಮ್ಮೆಲ್ಲರ ಹೋರಾಟ ಎಂದು ಭಾವಿಸುವ ಮೂಲಕ ಈ ಉಪವಾಸ ಸತ್ಯಾಗ್ರಹ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಿದೆ.
ಜನವರಿ 13 ರಂದು ಬೆಳಿಗ್ಗೆ 9 ಗಂಟೆಗೆ ಶಿರಸಿ ನಗರದ ಬಿಡ್ಕಿಬೈಲಿನಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದು, ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ, ನಂತರದಲ್ಲಿ ತಹಶೀಲ್ದಾರ ಕಛೇರಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುತ್ತಿದೆ.
ಆಸ್ಪತ್ರೆಗಾಗಿ ಒಂದಾಗೋಣ ಬನ್ನಿ
ರೂ.142 ಕೋಟಿಯ ಆಸ್ಪತ್ರೆ ಹಳ್ಳ ಹಿಡಿತ ಇದೆ. ಇದನ್ನು ನೋಡಿಕೊಂಡು ಸುಮ್ಮನೆ ಕೂತರೆ ಹೇಡಿಗಳಾಗುತ್ತೇವೆ. ಒಗ್ಗಟ್ಟಾಗಿ ಹೊರಡೋಣ ಬನ್ನಿ. ಇದು ಯಾವುದೇ ರಾಜಕೀಯ ಪಕ್ಷದ, ಧರ್ಮದ ಹೋರಾಟವಲ್ಲ. ಹೈಟೆಕ್ ಆಸ್ಪತ್ರೆಗಾಗಿ ಹೋರಾಟ ಅನಿವಾರ್ಯ. ಇದು ನಮ್ಮ ನಿಮ್ಮೆಲ್ಲರ ಸ್ವಾಭಿಮಾನದ ಹೋರಾಟ. ಇನ್ನು ಮಲಗಿದ್ದರೆ ಏಳುವಾಗ ಹೈಟೆಕ್ ಆಸ್ಪತ್ರೆ ಇರುವುದಿಲ್ಲ. ದೊಡ್ಡ ಗೋಡೌನ್ ಆಗುವ ಸಾಧ್ಯತೆ ಇದೆ. ಬನ್ನಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಿ. ಎಂದು ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.
ಗಮನಿಸಿ